Shivaji Surathkal-2.Film Event

Friday, September 09, 2022

152

 

*"IKEA" ದಲ್ಲಿ ಬಿಡುಗಡೆಯಾಯಿತು "ಶಿವಾಜಿ ಸುರತ್ಕಲ್ 2" ಟೀಸರ್.*

 

 *ನಾಯಕ ರಮೇಶ್ ಅರವಿಂದ್  ಹುಟ್ಟುಹಬ್ಬಕ್ಕೆ ಚಿತ್ರತಂಡದ ಒಲವಿನ ಉಡುಗೊರೆ.*

 

ಕನ್ನಡ ಚಿತ್ರರಂಗದ ಸುರದ್ರೂಪಿ ಹಾಗೂ ಪ್ರತಿಭಾವಂತ ನಟ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಸಂದರ್ಭದಲ್ಲಿ ಅವರು ನಾಯಕರಾಗಿ ನಟಿಸಿರುವ "ಶಿವಾಜಿ ಸುರತ್ಕಲ್ 2" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತುಮಕೂರು ರಸ್ತೆಯಲ್ಲಿರುವ ಅತೀ ದೊಡ್ಡ ಮಳಿಗೆ "IKEA"ದಲ್ಲಿ, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು.

 

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ " ಶಿವಾಜಿ ಸುರತ್ಕಲ್" ಚಿತ್ರಕ್ಕೆ ಸಿಕ್ಕ ಪ್ರಶಂಸೆಯೇ ಭಾಗ 2 ಮಾಡಲು ಸ್ಪೂರ್ತಿ. ಥಿಯೇಟರ್ ನಲ್ಲಿ ನಮ್ಮ ಚಿತ್ರ ಚೆನ್ನಾಗಿ ಓಡುತ್ತಿರುವ ಸಂದರ್ಭದಲ್ಲೇ ಲಾಕ್ ಡೌನ್ ಆಯಿತು..ಆನಂತರದ ವಿಷಯ ಎಲ್ಲರಿಗೂ ಗೊತ್ತು. ಆಮೇಲೆ ರಮೇಶ್ ಅರವಿಂದ್ ಅವರ ಜೊತೆಗೆ ಸಾಕಷ್ಟು ಚರ್ಚೆ ನಡೆಸಿದ ನಂತರ "ಶಿವಾಜಿ ಸುರತ್ಕಲ್ 2" ಚಿತ್ರಕ್ಕೆ ಚಾಲನೆ ದೊರೆಯಿತು.  ಎರಡನೇ ಭಾಗ ಮಾಡುವುದು ಅಷ್ಟು ಸುಲಭವಲ್ಲ. ಈಗ ಮೊದಲ ಹಾಗಲ್ಲ. ಎಲ್ಲರ ಬಳಿ ಮೊಬೈಲ್ ಇರುವುದರಿಂದ ಸಣ್ಣಸಣ್ಣ ವಿಷಯಗಳನ್ನು ಪ್ರೇಕ್ಷಕ ಗಮನಿಸುತ್ತಿರುತ್ತಾನೆ. ಈ ರೀತಿಯ ತಪ್ಪಾಗಿದೆ ಎಂದು ಆ ತಕ್ಷಣವೇ ತಿಳಿಸುತ್ತಾನೆ. ಅದನೆಲ್ಲಾ ಗಮನಿಸಿ ಚಿತ್ರ ಮಾಡುವ ಜವಾಬ್ದಾರಿ ನಿರ್ದೇಶಕನ ಮೇಲಿರುತ್ತದೆ. "ಶಿವಾಜಿ ಸುರತ್ಕಲ್ 2" ಕಥೆ ಸಹ ಚೆನ್ನಾಗಿದೆ. ಎಲ್ಲರಿಗೂ ಮೆಚ್ಚುಗೆಯಾಗಲಿದೆ. ರಮೇಶ್ ಅರವಿಂದ್ ಸರ್ ಹುಟ್ಟುಹಬ್ಬಕ್ಕೆ ಈ ಟೀಸರ್ ಬಿಡುಗಡೆ ಮಾಡಿದ್ದೀವಿ. ಇದು ನನ್ನೊಬ್ಬನ ಚಿತ್ರವಲ್ಲ. ತಂಡದ ಚಿತ್ರ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

"ಶಿವಾಜಿ ಸುರತ್ಕಲ್" ಸಿಕ್ಕ ಗೆಲುವಿನಿಂದ ಭಾಗ 2  ಮಾಡಲು ಮುಂದಾದ್ದೆವು. ಅದರಲ್ಲೂ ರಮೇಶ್ ಅರವಿಂದ್ ಅವರ ಸಹಕಾರ ಅಪಾರ ಎಂದ ನಿರ್ಮಾಪಕ ಅನೂಪ್ ಗೌಡ, ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ  ಧನ್ಯವಾದ ತಿಳಿಸಿದರು.

 

ನನ್ನ ನಿಮ್ಮ ಸ್ನೇಹಕ್ಕೆ ಮೂರು ದಶಕಗಳಾಗಿದೆ. ಈ ಮೂವತ್ತು ವರ್ಷಗಳಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಆದರೆ ಒಂದೇ ಪಾತ್ರವನ್ನು ಎರಡನೇ ಬಾರಿ ಮಾಡುತ್ತಿರುವುದು "ಶಿವಾಜಿ ಸುರತ್ಕಲ್ 2" ಚಿತ್ರದಲ್ಲಿ ಮಾತ್ರ. ನನಗೆ ನಿರ್ದೇಶಕ ಆಕಾಶ್ ಶ್ರೀವತ್ಸ ಹದಿನೈದು ವರ್ಷಗಳಿಂದ ಪರಿಚಯ. "ಆಕ್ಸಿಡೆಂಟ್" ಚಿತ್ರದಲ್ಲಿ ನನ್ನೊಟ್ಟಿಗೆ ಕೆಲಸವನ್ನೂ ಮಾಡಿದ್ದಾರೆ. ಅದ್ಭುತ ನಿರ್ದೇಶಕ. ಒಳ್ಳೆಯ ತಂಡ. "ಶಿವಾಜಿ ಸುರತ್ಕಲ್ 2" ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು‌ ನಾಯಕ ರಮೇಶ್ ಅರವಿಂದ್.

 

ನಾನು "ಶಿವಾಜಿ ಸುರತ್ಕಲ್" ಚಿತ್ರದಲ್ಲಿ ರಮೇಶ್ ಸರ್ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಹಾಗಾಗಿ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಭಾಗ ಎರಡು, ಮೂರು ಹೀಗೆ ಮಾಡುತ್ತಿರಿ ಎಂದು ಹೇಳಿದ್ದೀನಿ ಎನ್ನುತ್ತಾರೆ  ನಟಿ ರಾಧಿಕಾ ನಾರಾಯಣ್.

 

ನನಗೆ ಕೊರೋನ ನಂತರ ಇದು ಮೊದಲ ಪತ್ರಿಕಾಗೋಷ್ಠಿ. ರಮೇಶ್ ಸರ್ ಜೊತೆ ಅಭಿನಯ ಮಾಡುವುದು ನನ್ನ ಬಹು ದಿನಗಳ ಕನಸು. ಅದು ಈಗ ಈಡೇರಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ ಎಂದರು ನಟಿ ಮೇಫನ ಗಾಂವ್ಕರ್.

 

ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಆಚರಣೆ ಸಹ ನಡೆಯಿತು.

 

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ದರ್ಶನ್ - ಗುರುಪ್ರಸಾದ್ ಛಾಯಾಗ್ರಹಣ ಹಾಗೂ ಆಕಾಶ್ ಶ್ರೀವತ್ಸ ಸಂಕಲನ ಈ ಚಿತ್ರಕ್ಕಿದೆ.

.

ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ನಾಜರ್, ಆರಾಧ್ಯ, ರಮೇಶ್ ಭಟ್, ಶ್ರೀನಿವಾಸ್ ಪ್ರಭು, ಶೋಭ್ ರಾಜ್, ವಿದ್ಯಾಮೂರ್ತಿ, ವೀಣಾ ಸುಂದರ್, ರಘು ರಮಣಕೊಪ್ಪ, ಮಧುರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,