Dheera Bhagat Roy.News

Tuesday, January 17, 2023

109

ಕಂಠೀರವದಲ್ಲಿ ಧೀರ ಭಗತ್ರಾಯ್

         ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ ಹೊಂದಿರುವ ‘ಧೀರ ಭಗತ್‌ರಾಯ್’ ಸಿನಿಮಾದ ಕೊನೆ ಹಂತದ ಚಿತ್ರೀಕರಣವು ಕಂಠೀರವ ಸ್ಟುಡಿಯೋದಲ್ಲಿ ಹಾಕಲಾದ ಕೋರ್ಟ್ ಹಾಲ್ ಸೆಟ್‌ದಲ್ಲಿ ನಡೆದಿದೆ. ಈ ಸನ್ನಿವೇಶ ಚಿತ್ರದ ಜೀವಾಳವಾಗಿದ್ದು, ಇನ್ನು ಆರು ದಿವಸ ನಡೆಸಿದರೆ ಕುಂಬಳಕಾಯಿ ಒಡೆಯಲಾಗುವುದು. ಇಲ್ಲಿಯವರೆಗೂ ಯಾರು ತೆಗೆದುಕೊಳ್ಳದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ಭೂ ಸುಧಾರಣೆ ಕಾಯ್ದೆ ಜತೆಗೆ ಪ್ರಿವೆಂಶನ್ ಆಫ್ ಎಸ್.ಸಿ/ಎಸ್.ಟಿ ಅಟ್ರಾಸಿಟಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೇಳುವ ಪ್ರಯತ್ನ ಮಾಡಲಾಗಿದೆ. ಇಂತಹ ಅಂಶಗಳನ್ನು ಸರ್ವೆ ನಡೆಸಿ ತೆಗೆದುಕೊಂಡಿದ್ದರಿಂದ  ಎರಡು ವರ್ಷ ಸಮಯ  ತೆಗೆದುಕೊಂಡಿದೆ. ಬಾಂಬೆಯ ಪ್ರತಿಷ್ಟಿತ ಕಂಪೆನಿ ಕೂಡ ಸಿನಿಮಾದ ಕಂಟೆಂಟ್ ನೋಡಿ ಆಸಕ್ತಿ ಹೊಂದಿದೆ. ಇದರಿಂದ ಪ್ರೇರಿತರಾಗಿರುವ ನಿರ್ದೇಶಕ ಎಸ್.ಕರ್ಣನ್ ಬೇರೆ ಭಾಷೆಗಳಿಗೂ ಡಬ್ ಮಾಡಲು ನಿರ್ಧರಿಸಿದ್ದಾರೆ.

         ರಾಕೇಶ್‌ದಳವಾಯಿ ನಾಯಕನಾಗಿ ವಕೀಲನ ಪಾತ್ರವನ್ನು ನಿಭಾಯಿಸಿದ್ದಾರೆ. ಕೋಟ್ ದೃಶ್ಯಕ್ಕೋಸ್ಕರ ಸಾಕಷ್ಟು ತಾಲೀಮು ನಡೆಸಿ, ಲಾಯರ್‌ಗಳು ಹೇಗೆ ವಾದ ಮಂಡಿಸುತ್ತಾರೆ. ಅವರ ಮ್ಯಾನರಿಸಂ ಎಲ್ಲವನ್ನು ನೋಡಿ, ವೃತ್ತಿಪರ ವಕೀಲರಿಂದ ಒಂದಷ್ಟು ಮಾಹಿತಿ ಪಡೆದುಕೊಂಡು ಕ್ಯಾಮರ ಮುಂದೆ ನಿಂತಿದ್ದಾರಂತೆ.

       ಸಾವಿತ್ರಿ ಹೆಸರಿನಲ್ಲಿ ಸುಚರಿತಾಸಹಾಯರಾಜ್ ನಾಯಕಿ. ಖಳನಾಗಿ ಶರತ್‌ಲೋಹಿತಾಶ್ವ ಉಳಿದಂತೆ ಪ್ರವೀಣ್‌ಹಗಡೂರು, ಮಠಕೊಪ್ಪಳ, ಸುಧೀರ್‌ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್‌ಅಹ್ಮದ್, ಚಂದ್ರಿಕಾಗೌಡ, ನಯನಾ, ಸಿದ್ದಾರ್ಥ್‌ಗೋವಿಂದು, ಅನಿಲ್ ಹೊಸಕೊಪ್ಪ ಮುಂತಾದವರ ನಟನೆ ಇದೆ. ಓಂ ಸಿನಿ ಎಂಟರ್‌ಟೇನ್ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,