ಕ್ಷೇತ್ರಪತಿ ಅನ್ನದಾತನ ಕಥನ
‘ಕ್ಷೇತ್ರಪತಿ’ ಸಿನಿಮಾವು ರೈತ ಅನುಭವಿಸುವ ನೋವು ನಲಿವುಗಳನ್ನು ಸೊಗಸಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆತ ಬೆಳೆಯುವ ಬೆಳಗೆ ಸರಿಯಾದ ಬೆಲೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತದೆ. ರೈತನ ಶ್ರಮಕ್ಕೆ ಸರಿಯಾದ ನ್ಯಾಯಯುತವಾದ ಬೆಲೆ ಸಿಗುತ್ತದೆ ಎಂಬುದನ್ನು ತಿಳಿದು ದಿಟ್ಟ ಹೆಜ್ಜೆಯ ಮೂಲಕ ನೇರ ಮಾರಾಟಕ್ಕೆ ಮುಂದಾಗುವ ಬಿಸಿರಕ್ತ ಹುಡುಗ ಅನುಭವಿಸುವ ಸಂಕಷ್ಟಗಳನ್ನು ಹೇಳುವುದೇ ಮುಖ್ಯ ಕಥಾವಸ್ತುವಾಗಿದೆ. ಬಸವ ತಿಮ್ಮಾಪುರದವನಾಗಿದ್ದು, ಉನ್ನತ ವ್ಯಾಸಾಂಗ ಮಾಡುವಾಗ ಎದುರಾದ ಸಮಸ್ಯೆಗಳಿಗೆ ಹೋರಾಡಲು ಮುಂದಾಗುತ್ತಾನೆ.
. ಗ್ರಾಮೀಣ ಭಾಗದಲ್ಲಿ ನಡೆಯುವ ಅನ್ಯಾಯವನ್ನು ಕಂಡು ಸಿಡಿದೇಳುತ್ತಾನೆ. ಸಾಲದ ಸುಳಿಗೆ ಸಿಲುಕಿ ಸಾವಿಗೆ ಶರಣಾಗುವ ರೈತನ ಮಗನ ಅಸಹಾಯಕತೆ ಮತ್ತು ರೋಷಾವೇಶದ ಸನ್ನಿವೇಶಗಳು ಬಂದು ಹೋಗುತ್ತದೆ. ರೈತ ದೇಶದ ಬೆನ್ನಲುಬು ಅಂತಾರೆ. ಆದರೆ ಸಾಥ್ ಕೊಡುವವರು ರಾಜಕೀಯ ಮಾಡುತ್ತಾರೆ. ಇಂತಹ ಅರ್ಥಪೂರ್ಣ ದೃಶ್ಯಗಳು ನೈಜ ಘಟನೆಗಳಂತೆ ಕಂಡು ಬರುತ್ತದೆ.
ಮೊದಲರ್ದ ಸತ್ಯದಿಂದ ಕೂಡಿದ ಬಿಗಿಯಾದ ಸೀನ್ಗಳು ಮನಕಲಕುತ್ತದೆ. ವಿರಾಮದ ನಂತರ ಬರುವ ವಾಹಿನಿಗಳ ಬ್ರೇಕಿಂಗ್ ಸುದ್ದಿ ಕಂಡು ಬರುತ್ತದೆ. ಒಟ್ಟಾರೆ ಇಡೀ ಚಿತ್ರವು ರೈತನ ಸುತ್ತ ಸಾಗುತ್ತದೆ. ನಾಯಕ ನವೀನ್ಶಂಕರ್ ತೆರೆ ಮೇಲೆ ರಿಯಲ್ ಹೀರೋ ನಂತೆ ಕಾಣುತ್ತಾರೆ. ಅವರ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಇವರಿಗೆ ಜೋಡಿಯಾಗಿ ಅರ್ಚನಾಜೋಯಿಸ್ ಪರವಾಗಿಲ್ಲ. ಖಳನಾಗಿ ರಾಹುಲ್ಐನಾಪುರ, ಹರ್ಷಅರ್ಜುನ್ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಅಚ್ಯುತಕುಮಾರ್ ಪಾತ್ರ ಇದಕ್ಕೆ ಪೂರಕವಾಗಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಶ್ರೀಕಾಂತ್ಕಟಗಿ ಗೆಲುವು ಕಂಡಿದ್ದಾರೆ ಎನ್ನಬಹುದು.
ವೈ.ಬಿ.ಶಿವಸಾಗರ್ ಛಾಯಾಗ್ರಹಣ, ಮನುಶೇಡ್ಗಾರ್ ಸಂಕಲನ, ನರಸಿಂಹ ಸಾಹಸ, ಜೀವನ್ ನೃತ್ಯ ಎಲ್ಲವು ಅಚ್ಚ್ಚುಕಟ್ಟಾಗಿದೆ.
****