Kanmani(Udaya Tv)

Wednesday, October 10, 2018

665

ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಸತತ ೨೩ ವರ್ಷಗಳಿಂದ ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ಜನಮನ ಗೆದ್ದಿದೆ. ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದನ್ನು ಪ್ರೇಕ್ಷಕರಿಗೆ ನೀಡಲು ಉದಯ ಟಿವಿ ಸಜ್ಜಾಗಿದೆ. ಒಂದು ರೋಮಾಂಚಕ ಪ್ರೇಮಕಥೆಯಾದ “ಕಣ್ಮಣಿ” ಮಾರ್ಚ್ ೧೯ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೧೦:೦೦ಕ್ಕೆ ಪ್ರಸಾರವಾಗಲಿದೆ. “ಕಣ್ಮಣಿ” ಒಂದು ರೋಮಾಂಚಕ, ತ್ರಿಕೋನ ಪ್ರೇಮಕಥೆ. ಹೆಸರೇ ಹೇಳುವಂತೆ ಇದು ಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನಗೆ ಇರೋ ಸಮಸ್ಯೆಗಳ ನಡುವೆ ಎಲ್ಲರಿಗೂ ಪ್ರೀತಿ ಹಂಚಿ ಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ಹುಡುಗಿ ಅಂಜಲಿ. ತನ್ನ ಜೀವನದಲ್ಲಿ ನಡೆದ ಅಹಿತಕರ ಘಟನೆಯಿಂದ ನೊಂದ ನಾಯಕಿ ತನ್ನ ಹೊಸ ಬದುಕು ಹೇಗೆ ಕಟ್ಟಿಕೊಳ್ಳುತ್ತಾಳೆ. ಅವಳ ಮುಂದೆ ಎದುರಾಗುವ ವ್ಯಕ್ತಿಗಳನ್ನು, ಸವಾಲುಗಳನ್ನ ಹೇಗೆ ಎದುರಿಸುತ್ತಾಳೆ ಅನ್ನುವುದೇ ಈ ಕಥೆಯ ತಿರುಳು. ಕೋಟ್ಯಾಂತರ ರೂಪಾಯಿ ಆಸ್ತಿ ಇರುವ ಒಬ್ಬ ಕಡಕ್ ಬಿಸಿನೆಸ್‌ಮ್ಯಾನ್ ದ್ವಾರಕನಾಥ್ ಅಲಿಯಾಸ್ ಡಿ.ಕೆ. “ತಾನು ತಪ್ಪು ಮಾಡಲ್ಲ, ತಪ್ಪು ಮಾಡಿದವರನ್ನೂ ಬಿಡಲ್ಲ” ಅನ್ನೋದು ಇವನ ಘೋಷವಾಕ್ಯ. ಹೆಂಡತಿ ಕಾವ್ಯ ಸತ್ತು ನಾಲ್ಕು ವರ್ಷಗಳಾದರೂ ಇನ್ನೊಂದು ಮದುವೆಯಾಗದೆ ಅವಳ ನೆನಪಲ್ಲಿ ಇರೋ ಅಮರ ಪ್ರೇಮಿ. ಮಡದಿ ಮುಮತಾಜ್‌ಗಾಗಿ ಶಹಜಾನ್ ತಾಜ್ ಮಹಲ್ ಕಟ್ಟಿಸಿದ್ರೆ, ಡಿಕೆ ಹೆಂಡತಿ ಮೇಲಿನ ಪ್ರೀತಿಗೆ ಕಾವ್ಯ ಮಹಲ್ ಕಟ್ಟಿಸಿ ಇತಿಹಾಸ ಸೃಷ್ಟಿಸಲು ಹೊರಟವನು. ಅದಕ್ಕಾಗಿ ಏನೂ ಬೇಕಾದ್ರೂ ಮಾಡಲು ಸಿದ್ಧ ಇವನು. ಮುಂದೊಂದು ದಿನ ತನ್ನ ಹೆಂಡತಿಯ ರೂಪವುಳ್ಳ ಹುಡುಗಿಯೊಬ್ಬಳು ಇವನಿಗೆ ಎದುರಾಗುತ್ತಾಳೆ. ಅವಳು ಅವನ ಹೆಂಡಿತಿಯೇ, ಸತ್ತಿರುವವಳು ಎದುರಿಗೆ ಬರಲು ಹೇಗೆ ಸಾಧ್ಯಾ? ಅಥವಾ ಅವಳೇ ಬೇರೆನಾ? ಇದು ಇವನ ಕಥೆ. ಕಣ್ಮಣಿಯ ಇನ್ನೊಬ್ಬ ನಾಯಕ ಕಿಶನ್. ತುಂಬು ಕುಟುಂಬದಲ್ಲಿ ಬೆಳದಿರೋ ಇವನು ಸಂಸ್ಕಾರವಂತನೂ, ತುಂಟನೂ ಹೌದು. ಸ್ವಂತಃ ಕಂಪನಿ ಇದ್ರೂ ಪ್ರೀತಿಗಾಗಿ ಕೂಲಿ ಕೆಲಸ ಮಾಡೋಕು ಸಿದ್ಧ. ನಾಯಕಿಯ ಒಳ್ಳೆತನಕ್ಕೆ ಮನಸೋಲುವ ಕಿಶನ್ ಅವಳ ಮುಂದೆ ಪ್ರೇಮ ಭಿಕ್ಷೆ ಬೇಡುತ್ತಾನೆ. ನಾಯಕಿ ತನ್ನ ಜೀವನದಲ್ಲಿ ನಡೆದ ಘಟನೆ ಹೇಳಿ ಅವನಿಂದ ದೂರ ಹೋಗ್ತಾಳೆ. ಕಿಶನ್ ತನ್ನ ಪ್ರೀತಿಯನ್ನ ಹೇಗೆ ಪಡೆಯುತ್ತಾನೆ, ನಾಯಕಿ ಅವನಿಗೆ ಸಿಗುತ್ತಾಳಾ? ಅನ್ನೋದು ಇವನ ಕಥೆ.

ಪ್ರತೀ ಸಂಚಿಕೆಯಲ್ಲೂ ಕುತುಹಲಕಾರಿ ತಿರುವುಗಳನ್ನು ಹೊಂದಿದ್ದು, ಡಿಕೆ, ಅಂಜಲಿ, ಕಿಶನ್ ಈ ಮೂವರ ನಡುವೆ ನಡೆಯುವ ರೋಮಾಂಚಕ ಪ್ರೇಮಕಥೆಯೇ ಕಣ್ಮಣಿ. ಇಲ್ಲಿ ಪ್ರತಿಯೊಂದು ಪಾತ್ರಗಳು ತಮ್ಮದೇ ಆದ ಔಚಿತ್ಯವನ್ನು ಹೊಂದಿರುವುದು ಈ ಕಥೆಯ ವಿಶೇಷ.

ಕಣ್ಮಣಿ “ಪಾರಿಜಾತ ಟೆಲಿ ಎಂಟರ್ಟ್ರೆನರ್ಸ್” ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಚಿತ್ರಕಥೆ ದೇವ್, ವೆಂಕಟ್ ರಾಮ್ ಅವರದ್ದು, ಸಂಭಾಷಣೆ ರೂಪಾ ಪ್ರಭಾಕರ್, ಎಸ್. ಎಂ.ಪಾಟೀಲ್, ರಾಜಶೇಖರ್ ಬರೆಯುತ್ತಿದ್ದಾರೆ. ನಿರ್ದೇಶಕ ಪೃಥ್ವಿರಾಜ್ ಕುಲ್‌ಕರ್ಣಿ ಅವರು ನಿರ್ದೇಶಿಸುತ್ತಿದ್ದು, ಜೀವ ಅವರು ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ.

ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ದಿವ್ಯಾ ಶೈಲೇಶ್ ನಾಯಕಿ ಅಂಜಲಿ ಪಾತ್ರ ನಿಭಾಯಿಸುತ್ತಿದ್ದಾರೆ, ಕಿರುತೆರೆಗೆ ಈಗತಾನೆ ಕಾಲಿಟ್ಟ ದರ್ಶಕ್ ಗೌಡ ‘ಡಿ.ಕೆ’ ಪಾತ್ರ ಹಾಗೂ ಇನ್ನೊಬ್ಬ ನಾಯಕ ‘ಕಿಶನ್’ ಪಾತ್ರವನ್ನು ನಂದೀಶ್ ಅಂದಗಾರ ಮಾಡುತ್ತಿದ್ದಾರೆ. ಬೆಂಗಳೂರು ನಾಗೇಶ್, ಮೈಸೂರು ಮಾಲತಿ, ಗಿರೀಶ್, ಮೈಸೂರು ಶೋಭಾ, ನಾಯಕ್, ಸುಜಾತ, ಬೇಬಿ ಶ್ರೀಲಕ್ಷ್ಮಿ, ಸಿಂಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ತಾರಾಬಳಗವೂ ಶಕ್ತವಾಗಿದ್ದು, ಈಗಾಗಲೇ ಮೂವತ್ತಕ್ಕೂ ಹೆಚ್ಚು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ನಿರೀಕ್ಷಿತ ಫಲಿತಾಂಶವೇ ಬಂದಿದ್ದು, ಕನ್ನಡ ಕಿರುತೆರೆ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ಧಾರಾವಾಹಿ ತಂಡದ್ದು. ಹಾಗೆ ಕಣ್ಮಣಿ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಸುಕನ್ಯಾ ಹಾಸನ್ ಬರೆದಿದ್ದು, ಶ್ರೀಧರ್ ಸಂಭ್ರಮ್, ಹಿತನ್ ಹಾಸನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ತ್ರಿಕೋನ ಕಥೆಯ ಕಣ್ಮಣಿ ಇದೇ ಮಾರ್ಚ್ ೧೯ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೧೦.೦೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,