Manasa Sarovara

Wednesday, October 10, 2018

1355

ಉದಯ ಟಿವಿ ತನ್ನ ಹೊಸಬಗೆಯ ಕಾರ್ಯಕ್ರಮಗಳು ಮತ್ತು ನವನವೀನ ಪ್ರಯತ್ನಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಬೇರೂರಿದೆ. ಕಳೆದ ೨೩ ವರ್ಷಗಳಿಂದ ಬಗೆಬಗೆಯ ಸಿನಿಮಾಗಳು ಮತ್ತು ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸುತ್ತಲೇ ಇರುವ ಉದಯ ವಾಹಿನಿ, ಎಂದಿಗೂ ಕೂಡ ಹೊಸತನದತ್ತ ತುಡಿಯುವ ಮನರಂಜನಾ ವಾಹಿನಿ ಎಂದರೆ ತಪ್ಪಾಗಲಾರದು. ಕಳೆದ ಒಂದೆರಡು ವರುಷಗಳಿಂದ ಬೇರೆ ಬಗೆಯ ಕಥಾಹಂದರಗಳನ್ನು ಹೊಂದಿರುವ ಹ ಧಾರಾವಾಹಿಗಳನ್ನು ಉದಯ, ನೋಡುಗರಿಗೆ ಕೊಡುಗೆಯಾಗಿ ನೀಡಿದೆ. ನಂದಿನಿ, ಜೀವನದಿ, ಜೋ ಜೋ ಲಾಲಿ, ಅರಮನೆ,ದೊಡ್ಡಮನೆ ಸೊಸೆ ಮತ್ತು ಬ್ರಹ್ಮಾಸ್ತ್ರ ಧಾರಾವಾಹಿಗಳ ಯಶಸ್ಸಿನ ನಂತರ, ಈಗ ಕಿರುತೆರೆಯಲ್ಲೇ ಮೊದ ಬಾರಿಗೆ ಹೊಸದೊಂದು ಸಾಹಸಕ್ಕೆ ಉದಯ ಟಿವಿ ಸಜ್ಜಾಗಿದೆ. ಮಧುರವಾದ ಹಳೆಯದೊಂದು ಅದ್ಭುತ ಕನ್ನಡ ಚಿತ್ರವೊಂದನ್ನು ಮತ್ತೆ ಜನಮಾನಸದ ಎದುರಿಗೆ ಹೊಸದೇ ರೀತಿಯಲ್ಲಿ ವಿನೂತನವಾಗಿ ತರುವ ಪ್ರಯತ್ನಕ್ಕೆ ಉದಯ ಟಿವಿ ಹೊರಟಿದೆ. ಅದೇ, “ಮಾನಸ ಸರೋವರ” ಎನ್ನುವ ಸುಂದರ ಚಿತ್ರವನ್ನು ಧಾರಾವಾಹಿಯಾಗಿ ಮುಂದುವರಿಸುವ ಯತ್ನ. “ಮಾನಸ ಸರೋವರ” ೧೯೮೩ ರಲ್ಲಿ ತೆರೆಕಂಡು ಸೂಪರ್ ಹಿಟ್ ಸಿನಿಮಾ. ಪುಟ್ಟಣ್ಣ ಕಣಗಾಲರ ನಿರ್ದೇಶನದ, ಶ್ರೀನಾಥ್, ಪದ್ಮ ವಾಸಂತಿ ಮತ್ತು ರಾಮಕೃಷ್ಣರ ಮನೋಜ್ಞ ಅಭಿನಯ ಮತ್ತು ಆ ಸುಮಧುರ ಹಾಡುಗಳನ್ನ ಯಾರಿಗೆ ತಾನೆ ಮರೆಯೋದಕ್ಕೆ ಸಾಧ್ಯ. ಈಗ ಅದೇ ಸಿನಿಮಾದ ಮುಂದುವರೆದ ಭಾಗವಾಗಿ “ಮಾನಸ ಸರೋವರ” ಅನ್ನೋ ಹೆಸರಿನಲ್ಲೇ ಧಾರಾವಾಹಿ ಉದಯ ಟಿವಿಯಲ್ಲಿ ಟೆಲಿಕಾಸ್ಟ್ ಆಗೋಕೆ ರೆಡಿಯಾಗಿದೆ. ಈ ಧಾರಾವಾಹಿ ಎಲ್ಲಾ ರೀತಿಯಲ್ಲೂ ಜನಮಾನಸದಲ್ಲಿ ಒಂದು ಕುತೂಹಲವನ್ನೇ ಸೃಷ್ಠಿಸಿದೆ. ಒಂದು ಕಡೆ ಶ್ರೀನಾಥ್, ಪದ್ಮ ವಾಸಂತಿ, ರಾಮಕೃಷ್ಣ ನಟಿಸುತ್ತಿದ್ದಾರೆ ಅನ್ನೋದಾದ್ರೆ ಮತ್ತೊಂದು ಕಡೆ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ನಮ್ಮ ಡಾ|| ಶಿವರಾಜ್ ಕುಮಾರ್ ರವರ ಬ್ಯಾನರ್ ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್ ಈ ಧಾರಾವಾಹಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣರವರ ಮಗಳು ನಿವೇದಿತಾ ಶಿವರಾಜ್ ಕುಮಾರ್ ಇದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಮನಸ್ಸಿನ ಆಧಾರದ ಮೇಲೆ ಚಿತ್ರಿತವಾಗಿದ್ದ ಮಾನಸ ಸರೋವರ ಸಿನಿಮಾ ಬಹು ಸೂಕ್ಷ್ಮ ಕಥಾಹಂದರ ಹೊಂದಿದ್ದ ಚಿತ್ರ. ಈಗ ಅದರದ್ದೇ ಮುಂದುವರೆದ ಭಾಗವಾಗಿ ಸೀರಿಯಲ್ ಬರ್ತಿದೆ ಅಂದ್ರೆ ವೀಕ್ಷಕ ಪ್ರಭುಗಳಿಗೆ ಅದೊಂದು ರಸದೌತಣವೇ ಸರಿ. ಈಗಾಗಲೇ ಈ ಧಾರಾವಾಹಿಯ ಪ್ರೋಮೋಗಳು ಕರ್ನಾಟಕದಾದ್ಯಂತ ಮನೆಮಾತಾಗಿದೆ. ಅದ್ರಲ್ಲೂ ಶಿವಣ್ಣಾನೇ ಒಂದು ಪ್ರೋಮೋದಲ್ಲಿ ಈ ಧಾರಾವಾಹಿಯ ಬಗ್ಗೆ ಹೇಳಿರೋದು ಅವರಿಗೆ ಈ ಕಥೆಯ ಮೇಲಿರೋ ಭರವಸೆ ತೋರಿಸತ್ತೆ. ಮಾನಸ ಸರೋವರ ಸಿನಮಾದ ಕ್ಲೈಮಾಕ್ಸ್ ನಲ್ಲಿ ಹುಚ್ಚನಾದ ಡಾ||ಆನಂದ್ ಈಗ ಏನಾಗಿದ್ದಾರೆ? ಸಂತೋಷ್ ನನ್ನು ವರಿಸಿದ ವಾಸಂತಿ ಬದುಕು ಈಗ ಹೇಗಿದೆ? ಆನಂದ್ ನನ್ನು ದುಡ್ಡಿನಾಸೆಗೆ ಬಿಟ್ಟು ಹೋಗಿದ್ದ ಅವರ ಪತ್ನೀ ಸರೋಜಾ ಈ ಏನು ಮಾಡುತ್ತಿದ್ದಾಳೆ? ಎಂಬ ಎಳೆಗಳನ್ನು ಇಟ್ಟುಕೊಂಡು ಧಾರಾವಾಹಿಯನ್ನು ಮುಂದುವರಿಸಲಾಗಿದೆ.

ಪುಟ್ಟಣ್ಣ ಅವರು ನನ್ನ ಫೇವರಿಟ್ ನಿರ್ದೇಶಕ, ಭಾರತೀಯ ಚಿತ್ರರಂಗದಲ್ಲೇ ಅವರಂತಹ ನಿರ್ದೇಶಕ ಇನ್ನೊಬ್ಬರಿಲ್ಲ್ಲ. ಡೈರೆಕ್ಟರ್ಸ್ ಡೈರೆಕ್ಟರ್ ಅವರು. ಮಾಮೂಲಿ ಕಥೆಗಳನ್ನ ಹೊರತು ಪಡಿಸಿ ಹೊಸ ಪ್ರಯತ್ನ ಮಾಡಬೇಕು ಅನ್ನೋದು ನನ್ನ ಮಗಳ ಆಸೆ ಆಗಿತ್ತು. ಅದಕ್ಕೋಸ್ಕರ ಮಾನಸ ಸರೋವರ ಧಾರಾವಾಹಿ ಮಾಡೋಕೆ ಹೊರಟೆವು ಎನ್ನುತ್ತಾರೆ ಶಿವಣ್ಣ.

ಎಲ್ಲಿ ಕೂಡ ಕಾಂಪ್ರೊಮೈಸ್ ಮಾಡಿಕೊಳ್ಳದೇ ಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದೇವೆ. ಸಿನಿಮಾಗಳಿಗೆ ಬಳಸುವ ರೆಡ್ ಎಪಿಕ್, ಆರೀ ಅಲೆಕ್ಸಾ ಕ್ಯಾಮರಾಗಳಲ್ಲಿ ಶೂಟಿಂಗ್ ನಡೀತಿದೆ. ಶ್ರೀನಾಥ್ ಸರ್ ಸೇರಿದಂತೆ ಪ್ರತೀ ಕಲಾವಿದರೂ ಕೂಡ ತುಂಬ ಚೆನ್ನಾಗಿ ಆಕ್ಟ್ ಮಾಡುತ್ತಿದ್ದಾರೆ ಎನ್ನುತ್ತಾರೆ, ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್.

ನಾನು ಈ ಸೀರಿಯಲ್ ನಟನೆ ಮಾಡೋದಕ್ಕೆ ಮುಖ್ಯ ಕಾರಣಾನೇ ಪುಟ್ಟಣ್ಣ ಅವರು. ಪ್ರತೀ ಸೀನಿನಲ್ಲಿ ನಟನೆ ಮಾಡೋವಾಗ ಅವರೇ ಕಣ್ಮುಂದೆ ಬರುತ್ತಾರೆ. ಭೌತಿಕವಾಗಿ ನಮ್ಮ ಜೊತೆಗೆ ಅವರು ಇಂದು ಇರದೇ ಇದ್ದರೂ, ಮಾನಸಿಕವಾಗಿ ಜೊತೆಗಿದ್ದಾರೆ ಎನ್ನುವ ಭಾವ ನನ್ನನ್ನು ಆವರಿಸಿದೆ ಎನ್ನುತ್ತಾರೆ ಪ್ರಣಯರಾಜಾ ಶ್ರೀನಾಥ್.

ನಾನು ಧಾರಾವಾಹಿ ಮಾಡೋಕೆ ಶಿವರಾಜ್ ಕುಮಾರ್ ಅವರೇ ಕಾರಣ. ರಾಜಕುಮಾರ್ ಕುಟುಂಬ ಅಂದರೆ ನನಗೆ ಅಪರಿಮಿತ ವಿಶ್ವಾಸ, ಧಾರಾವಾಹಿ ಕೂಡ ತುಂಬ ಚೆನ್ನಾಗಿ ಮೂಡಿಬರುತ್ತಿದೆ ಅನ್ನುವುದು ನಟ ರಾಮಕೃಷ್ಣ ಮನದಾಳದ ಮಾತು.

ಮಾನಸ ಸರೋವರ ನನ್ನ ಫಸ್ಟ್ ಸಿನಿಮಾ. ಈಗ ಮತ್ತೆ ಅದೇ ಕಥೆಯ ಮುಂದುವರಿಕೆಯನ್ನ ಧಾರಾವಾಹಿಯಾಗಿ ಮಾಡ್ತಾ ಇರೋದೆ ಒಂದು ಥ್ರಿಲ್ ಎನ್ನುತ್ತಾರೆ, ನಟಿ ಪದ್ಮಾವಾಸಂತಿ.

ಮಾನಸ ಸರೋವರ ಧಾರಾವಾಹಿಯನ್ನು ಮೂಲಕಥೆಗೆ ಯಾವ ಚ್ಯುತಿಯೂ ಬರದ ಹಾಗೆ ಈ ಕಥೆಯನ್ನ ಹೊಸೆಯಲಾಗಿದೆ. ಧಾರಾವಾಹಿ ರಂಗದಲ್ಲಿ ನುರಿತ ನಿರ್ದೇಶಕರಾದ ರಾಮ್ ಜಯಶೀಲ್ ವೈದ್ಯ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲೈನ್ ಪ್ರೊಡಕ್ಷನ್ ಮಾಡ್ತಿರೋದು ದೃಶ್ಯ ಕ್ರಿಯೇಷನ್ಸ್‌ನ ಸುಂದರೇಶ್. ಛಾಯಾಗ್ರಹಣದ ಹೊಣೆಯನ್ನ ರವಿ ಕಿಶೋರ್ ಹೊತ್ತಿದ್ದಾರೆ.  ಉಳಿದಂತೆ ಹಿರಿಯರಾದ ಶ್ರೀನಾಥ್, ಪದ್ಮಾ ವಾಸಂತಿ, ರಾಮಕೃಷ್ಣ ಮೊದಲಾದ ಹಿರಿಯ ಕಲಾವಿದರ ಜೊತೆ ಪ್ರಜ್ವಲ್, ಶಿಲ್ಪಾ, ಶೃತಿ ಮೊದಲಾದ ಹೊಸಕಲಾವಿದರ ದಂಡೆ ಇದೆ.

ಈ ಧಾರಾವಾಹಿಯ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಶಿವಣ್ಣನವರೇ ಮೊದಲ ೧೦ ಎಪಿಸೋಡ್ಗಳ ಕಥೆಯನ್ನೂ ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಒಂದು ಸಂಚಲನವನ್ನಂತು ಈ ಧಾರಾವಾಹಿ ಹುಟ್ಟುಹಾಕತ್ತೆ ಅನ್ನೋದ್ರಲ್ಲಿ ಯಾವ ಸಂಶಯವೂ ಇಲ್ಲ. ಧಾರಾವಾಹಿಯ ಕಥೆ ಹೇಗೆ ಶುರು ಆಗತ್ತೆ ಅಂದ್ರೆ ವಾಸಂತಿಯ ಮಗಳು ಸುನಿಧಿ ಮನಶ್ಶಾಸ್ತ್ರಜ್ಞೆ. ತನ್ನ ತಾಯಿಯಿಂದಲೇ ಹುಚ್ಚನಾದ ಡಾ||ಆನಂದ್ ನನ್ನು ಕ್ಯೂರ್ ಮಾಡುತ್ತೇನೆ ಎಂದು ಶಪಥ ಮಾಡುವ ಸುನಿಧಿ ಆ ಪ್ರಯತ್ನದಲ್ಲಿ ಗೆಲ್ಲುತ್ತಾಳಾ? ತನ್ನ ತಾಯಿಯಿಂದಾನೇ ಹೀಗಾಯ್ತು ಅಂತ ಗೊತ್ತಾದ್ರೆ ಸುನಿಧಿ ಏನು ಮಾಡ್ತಾಳೆ? ಇವೇ ಮೊದಲಾದ ಹತ್ತಾರು ಟ್ವಿಸ್ಟ್ ಗಳನ್ನು ಒಳಗೊಂಡಿದೆ ಮಾನಸ ಸರೋವರ ಧಾರಾವಾಹಿ.

ಜೊತೆಗೆ ಮಾನಸ ಸರೋವರ ತಂಡ ಒಂದು ಕಾಂಟೆಸ್ಟ್ ಕೂಡಾ ಮಾಡ್ತಿದ್ದಾರೆ. ಫ಼ೆಬ್ರವರಿ ೧೯ ರಿಂದ ಮಾರ್ಚ್ ೨ ರವರೆಗೆ ಪ್ರತಿದಿನ ಮಾನಸ ಸರೋವರ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸರಿಯಾದ ಉತ್ತರ ಕೊಟ್ಟು ವಿಜಯಶಾಲಿಗಳಾದ ಒಂದು ಫ಼್ಯಾಮಿಲಿ ಇಡಿ ಮಾನಸ ಸರೋವರ ತಂಡದ ಜೊತೆ ಭೋಜನಕೂಟದಲ್ಲಿ ಭಾಗವಹಿಸಬಹುದು ಜೊತೆಗೆ ಹ್ಯಾಟ್ರಿಕ್ ಹಿರೋ ಶಿವಣ್ಣಾನೂ ಇರ್ತಾರೆ.

 

ಉದಯ ಟವಿಯ ಮಾನಸ ಸರೊವರ ಇದೇ ಫೆಬ್ರವರಿ ೨೬ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೯.೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,