ಹೊಸ ಚಿತ್ರಕ್ಕೆ ಸಹಿ ಹಾಕಿದ ಕೋಮಲ್ಕುಮಾರ್
‘ನಮೋ ಭೂತಾತ್ಮ’ ಚಿತ್ರದ ಯಶಸ್ಸಿನಿಂದ ಕೋಮಲ್ಕುಮಾರ್ ಸದ್ಯ ಬ್ಯುಸಿಯಾಗುತ್ತಿದ್ದಾರೆ. ಒಂದರ ನಂತರ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದು, ಇದರ ಸಾಲಿಗೆ ‘ಕುಟೀರ’ ಸೇರಿಕೊಂಡಿದೆ. ಶ್ರೀ ಬಂಡೆ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಅನೂಪ್ ಆಂಟೋನಿ ನಿರ್ದೇಶನದಲ್ಲಿ, ಕಂಸಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಧುಮರಿಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.
ನಂತರ ಮಾತನಾಡಿದ ಕೋಮಲ್, ಇದೊಂದು ಹಾರರ್ ಕಾಮಿಡಿ ಕಥೆಯನ್ನು ಹೊಂದಿದೆ. ಕುಟೀರ ಹೆಸರಿನ ಪಾಳು ಬಿದ್ದಿರುವ ಮನೆಯಲ್ಲಿ ನಡೆಯುವ ಚೇಷ್ಟೆಗಳು ನಗು ತರಿಸುತ್ತದೆ. ಇದೇ ಜಾನರ್ದಲ್ಲಿ ನಾನು ನಟಿಸುತ್ತಿರುವ ಐದನೇ ಚಿತ್ರ. ಒಂದಲ್ಲ ಎರಡಲ್ಲ ಡಜನ್ ದೆವ್ವಗಳ ಜೊತೆಗೆ ಕಣ್ಣಾಮುಚ್ಚಾಲೆ ಇದೆ. ಇನ್ನು ಡಜನ್ ದೆವ್ವಗಳು ಎಷ್ಟು ಕಾಟ ಕೊಡುತ್ತದೆ ಎಂಬುದನ್ನು ನೀವು ನೋಡಬೇಕು ಎಂದರು.
ಇನ್ನು ಚಿತ್ರತಂಡವು ಕೋಮಲ್ ಅಭಿನಯದ ೨೫ನೇ ಸಿನಿಮಾ ಅಂತ ಘೋಷಿಸಿದ್ದಾರೆ. ಆದರೆ ಕೋಮಲ್ ಹೇಳುವಂತೆ ಇದೂವರೆಗೂ ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಹೀರೋ ಆಗಿಯೂ ೩೩ ಆಗಿದೆ. ಸಿಂಗಲ್ ಹೀರೋ ಆಗಿ ಲೆಕ್ಕ ಹಾಕಿದಾಗ ೨೫ನೇ ಚಿತ್ರವಾಯಿತು ಎನ್ನುತ್ತಾರೆ.
ಪ್ರಿಯಾಂಕತಿಮ್ಮೇಶ್ ನಾಯಕಿ. ಉಳಿದಂತೆ ಅವಿನಾಶ್, ಯಶ್ಶೆಟ್ಟಿ, ಕಾಕ್ರೋಚ್ಸುಧಿ, ಮುಂತಾದವರು ಅಭಿನಯಿಸುತ್ತಿದ್ದಾರೆ. ಬಿ.ಜೆ.ಭರತ್ ಸಂಗೀತ, ಅರುಣ್ಸುರೇಶ್ ಛಾಯಾಗ್ರಹಣ, ಶಂಕರ್ರಾಮನ್ ಸಂಭಾಷಣೆ ಇರಲಿದೆ.