Suthradaari.Film News

Sunday, May 04, 2025

50

 

*ಮೇ 9 ಕ್ಕೆ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ "ಸೂತ್ರಧಾರಿ" ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಸಾಥ್.* .

 

 *ಇದು ನವರಸನ್ ನಿರ್ಮಾಣದ, ಕಿರಣ್ ಕುಮಾರ್ ನಿರ್ದೇಶನದ ಹಾಗೂ ಚಂದನ್ ಶೆಟ್ಟಿ ಅಭಿನಯದ ಚಿತ್ರ.*

 

ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್‌ ನಿರ್ಮಾಣ‌ ಮಾಡಿರುವ,‌ ಕಿರಣ್ ಕುಮಾರ್ ನಿರ್ದೇಶನದಲ್ಲಿ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ "ಸೂತ್ರಧಾರಿ" ಚಿತ್ರ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನಪ್ರಿಯವಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಮೇ 9 ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಪ್ರಿ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ ಮುಂತಾದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.  ನಂತರ ಗಣ್ಯರು ಹಾಗೂ ಚಿತ್ರತಂಡದ  ಸದಸ್ಯರು "ಸೂತ್ರಧಾರಿ"ಯ ಬಗ್ಗೆ ಮಾತನಾಡಿದರು.

 

ನವರಸನ್ ಅವರನ್ನು ಬಹಳ ವರ್ಷಗಳಿಂದ ನೋಡುತ್ತಿದ್ದೇನೆ. ಅವರ ಮುಖದಲ್ಲಿ ಸದಾ ನಗು ಇರುತ್ತದೆ. ಇನ್ನೂ ಒಬ್ಬ ನಿರ್ಮಾಪಕ ತನ್ನ ಚಿತ್ರವನ್ನು ಹೆಚ್ಚು ಪ್ರೀತಿಸಬೇಕು. ಅದಕ್ಕೆ ಈ ಸಮಾರಂಭ ಸಾಕ್ಷಿ. ಹಾಡುಗಳ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ನಾಯಕನಾಗಿ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ‌. ಟ್ರೇಲರ್ ವಿಭಿನ್ನವಾಗಿದೆ. ಚಿತ್ರ ಕೂಡ ಇದೇ ರೀತಿ ಇರುತ್ತದೆ ಎಂಬ ಭರವಸೆ ಇದೆ ಎಂದು ರವಿಚಂದ್ರನ್ ತಿಳಿಸಿದರು.

 ನವರಸನ್ ನಮ್ಮ ಸಾಕಷ್ಟು ಇವೆಂಟ್ ಗಳನ್ನು ಮಾಡಿಕೊಟ್ಟಿದ್ದಾರೆ. ನಾನು ಚಂದನ್ ಶೆಟ್ಟಿ ಅವರ ಹಾಡುಗಳಿಗೆ ಅಭಿಮಾನಿ. ಅವರ ಕೆಲವು ಹಾಡುಗಳನ್ನು ಗುನುಗುತ್ತಿರುತ್ತೇನೆ. ಈ ಚಿತ್ರದ ಮೂಲಕ ಅವರು ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಹಾರೈಸಿದ ಶಿವರಾಜಕುಮಾರ್, ನಾನು ಈ ಚಿತ್ರವನ್ನು  ನೋಡುತ್ತೇನೆ ಎಂದರು.  

       

ರವಿಚಂದ್ರನ್ ಹಾಗೂ ಶಿವಣ್ಣ ಅವರು ಬಂದು ನಮ್ಮ ಚಿತ್ರಕ್ಕೆ ಬಂದು ಹಾರೈಸಿದ್ದು ಬಹಳ ಖುಷಿಯಾಗಿದೆ. ಇಬ್ಬರಿಗೂ ನಾನು ಚಿರ ಋಣಿ. ಇನ್ನೂ ಮೇ 1 ರಂದು ಆಟೋ ಚಾಲಕರು ಸೇರಿದಂತೆ ಕೆಲವರಿಗೆ ಈ ಚಿತ್ರವನ್ನು ತೋರಿಸಿದ್ದೆವು. ಅವರು ಚಿತ್ರ ನೋಡಿ ಬಹಳ ಸಂತಸಪಟ್ಟರು. ಹಾಗೆ ಅವರು ಹೇಳಿದ ಸಣ್ಣಪುಟ್ಟ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಅದನ್ನು ಸರಿ ಪಡಿಸಿದ್ದೇವೆ. ಮೇ 9 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ನವರಸನ್ .

 

ಹಿಂದೆ ಹೇಳಿದಂತೆ ನಾನು ಹೀರೋ ಆಗಬೇಕೆಂದು ಆಸೆ ಪಟ್ಟವರು ನಮ್ಮ ಅಪ್ಪ. ಅವರ ಆಸೆ ಈಡೇರುವ ದಿನ ಸಮೀಪಿಸಿದೆ. ಇದೇ ಮೇ 9 ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಇಂದಿನ ಸಮಾರಂಭಕ್ಕೆ ಚಿತ್ರರಂಗದ ಲೆಜೆಂಡ್ ಗಳಾದ ಶಿವರಾಜಕುಮಾರ್ ಹಾಗೂ ರವಿಚಂದ್ರನ್ ಅವರು ಬಂದು ನಮಗೆ ಆಶೀರ್ವದಿಸಿದ್ದು ಹೇಳಿಕೊಳ್ಳಲಾಗದಷ್ಟು ಆನಂದವಾಗಿದೆ ಎನ್ನುತ್ತಾರೆ ನಟ ಚಂದನ್ ಶೆಟ್ಟಿ.

 

ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ‌ನಟರಾದ ತಬಲ ನಾಣಿ, ರಮೇಶ್, ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಭಾಷಣೆ ಬರೆದಿದರುವ ಕಿನ್ನಾಳ್‌ ರಾಜ್ ಮುಂತಾದವರು "ಸೂತ್ರಧಾರಿ" ಬಗ್ಗೆ ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,