ಕುಲ ಕುಲ ಕುಲವೆಂದು ಹೊಡೆದಾಡುವ ಕಥೆ
ಚಿತ್ರ: ಕುಲದಲ್ಲಿ ಕೀಳ್ಯಾವುದೋ
ನಿರ್ದೇಶನ: ಕೆ ರಾಮನಾರಾಯಣ್
ನಿರ್ಮಾಣ: ಸಂತೋಷ್ ವಿದ್ಯಾ
ತಾರಾಗಣ: ಮಡೆನೂರು ಮನು, ಮೌನ ಗುಡ್ಡೆಮನೆ ಮತ್ತಿತರರು.
ಈ ಸಿನಿಮಾದ ಶೀರ್ಷಿಕೆಗೆ ಯಾವ ಪ್ರಚಾರವೂ ಬೇಕಿಲ್ಲ. ಯಾಕೆಂದರೆ ಇದು ಡಾ.ರಾಜ್ ಕುಮಾರ್ ನಟನೆಯ ಸತ್ಯಹರಿಶ್ಚಂದ್ರ ಚಿತ್ರದ ಜನಪ್ರಿಯ ಗೀತೆಯ ಮೊದಲ ಸಾಲು. ಆದರೆ ಈ ಸಾಲನ್ನು ಟೈಟಲ್ ಮಾಡಿದ ಚಿತ್ರ ನ್ಯಾಯ ನಿಜಕ್ಕೂ ನ್ಯಾಯ ನೀಡಿದೆಯ?
ಇಲ್ಲಿದೆ ಚಿತ್ರಲಹರಿ ವಿಮರ್ಶೆ.
ಮುತ್ತರಸ ಈ ಕತೆಯ ನಾಯಕ. ಈತನ ವಂಶಜ ಹಿರಿಯ ಮುತ್ತರಸ ನಾಡಿನಲ್ಲಿನ ಮೇಲು ಕೀಳು ಆಚಾರವನ್ನು ತಡೆಯಲಾಗದೆ ಕಾಡು ಸೇರಿರುತ್ತಾನೆ. ಇದೀಗ ಕಾಡಿನಿಂದ ಮರಳಿ ನಾಡು ಸೇರುವ ನಾಯಕನಾಗಿ ಹೊಸ ಮುತ್ತರಸ ನೇತೃತ್ವ ವಹಿಸುತ್ತಾನೆ.
ತಲೆಮಾರುಗಳು ಎಷ್ಟೇ ಬದಲಾಗಲಿ. ಮನುಷ್ಯ ಪಂಡಗಡಗಳ ನಡುವಿನ ಹೊಡೆದಾಟಕ್ಕೆ ಆರಂಭ ಕಾಲದಿಂದಲೂ ಕಾರಣಗಳು ಸೃಷ್ಟಿಯಾಗುತ್ತಲೇ ಬಂದಿವೆ. ಅದರಲ್ಲೂ ಜಾತಿ, ಧರ್ಮದ ಹೆಸರಲ್ಲಿ ಕೊಲೆ ನಡೆದರೂ ಅದನ್ನು ಸಮರ್ಥಿಸುವ ಮಂದಿ ಇಂದಿನ ನಾಗರಿಕ ಸಮಾಜದಲ್ಲೂ ಇದ್ದಾರೆ. ಆದರೆ ಇದಕ್ಕಿಂತ ಕಾಡೇ ಎಷ್ಟೋ ಮೇಲು ಎನ್ನುವ ಸಂದರ್ಭವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹೀಗಾಗಿಯೇ ನಾಯಕ ಮುತ್ತರಸ ನಾಡಿನಲ್ಲಿದ್ದ ತನ್ನವರನ್ನು ಮತ್ತೆ ಕಾಡಿಗೆ ಸೇರಿಸುವ ಪ್ರಯತ್ನ ಮಾಡುತ್ತಾನೆ. ನಾಯಕ ಇಂಥ ನಿರ್ಧಾರ ಮಾಡಿದ್ಯಾಕೆ? ಇದರಲ್ಲಿ ಯಶಸ್ವಿಯಾಗುತ್ತಾನೆಯೇ ಎನ್ನುವುದರ ಉತ್ತರವೇ ಈ ಚಿತ್ರದ ಹೂರಣ.
ಚಿತ್ರದಲ್ಲಿ ಇಬ್ಬರು ಮುತ್ತರಸರಿದ್ದಾರೆ. ಈ ವಂಶದ ಹಳೆಯ ಕಾಲದ ಮುತ್ತರಸನಾಗಿ ಯೋಗರಾಭಟ್ ನಟಿಸಿದ್ದರೆ, ಚಿತ್ರದ ನಾಯಕನಾಗಿ ಮಡೆನೂರು ಮನು ಅಭಿನಯಿಸಿದ್ದಾರೆ. ಮಡೆನೂರು ಮನು ಸಾಹಸದ ದೃಶ್ಯಗಳಲ್ಲಿ ಮನ ಸೆಳೆಯುತ್ತಾರೆ. ಇವರಿಗೆ ಜೋಡಿಯಾಗಿ ನಟಿಸಿರುವ ಮೌನ ಗುಡ್ಡೆಮನೆ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಪ್ರಮುಖ ಪೋಷಕ ಪಾತ್ರಗಳನ್ನು ನಿಭಾಯಿಸಿರುವ ಶರತ್ ಲೋಹಿತಾಶ್ವ, ತಬಲಾ ನಾಣಿ ಮತ್ತು ಕರಿಸುಬ್ಬು ತಮ್ಮದೇ ಶೈಲಿಯಿಂದ ಆಕರ್ಷಣೆ ಸೃಷ್ಟಿಸಿದ್ದಾರೆ. ಮನೋಮೂರ್ತಿ ಸಂಗೀತದಲ ಎರಡು ಹಾಡುಗಳು ಮಾಧುರ್ಯಪೂರ್ಣವಾಗಿವೆ.
ಕುಲದಲ್ಲಿನ ಮೇಲು ಕೀಳಿನಿಂದಾಗಿ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನು ಎನ್ನುವುದು ನಿರ್ದೇಶಕ ರಾಮನಾರಾಯಣ್ ಈ ಸಿನಿಮಾದ ಮೂಲಕ ಮನಮುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.