Maya(Udaya Tv)

Wednesday, October 10, 2018

878

ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಸತತ ೨೩ ವರ್ಷಗಳಿಂದ ಅನೇಕ ಮನರಂಜನೆಯ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಉದಯಟಿವಿ ಈಗಾಗಲೇ ಜನಮನ ಗೆದ್ದಿದೆ. ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದನ್ನು ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದೆ. ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ಮಧ್ಯೆ ನಡೆಯುವ ಹೊಸ ಪ್ರೇಮಕಥೆ “ಬ್ರಹ್ಮಾಸ್ತ್ರ” ಜನವರಿ ೨೨ ರಿಂದ ಪ್ರತಿ ದಿನ ಸೋಮವಾರದಿಂದ ಶುಕ್ರವಾರ ರಾತ್ರಿ ೮ಕ್ಕೆ ಬಿತ್ತರಗೊಳ್ಳಲಿದೆ. ಅತ್ತೆ ಸೊಸೆ ಕಲಹ, ತಾಯಿ-ಮಗಳ ಅನುಬಂಧ, ತ್ರಿಕೋನ ಪ್ರೇಮಕಥೆ, ಸವತಿ-ನಾದಿನಿ ಮತ್ಸರ ಇವೆಲ್ಲವೂ ಇರುವ ಧಾರಾವಾಹಿಗಳು ಜನರ ಮೆಚ್ಚುಗೆ ಗಳಿಸಿವೆ ನಿಜ. ಇವುಗಳ ನಡುವೆ ವಿಭಿನ್ನ ಪ್ರಯತ್ನ ಮಾಡಿ ವಿಶಿಷ್ಟ ಕಥೆಗಳನ್ನು ಜನರಿಗೆ ತಲುಪಿಸೋ ನಿರಂತರ ಕಾರ್ಯದಲ್ಲಿ ಯಶಸ್ವಿಯಾದ ಸಂಸ್ಥೆಯೇ ಆರ್ ಜಿ ಮೀಡೀಯಾ ಸ್ಟಫ್. ಈ ದಿಸೆಯಲ್ಲಿ ವಿಭಿನ್ನ ಮನೋಧರ್ಮದ ಎರಡು ಕುಟುಂಬ, ಒಂದು ಕಡೆ ಅಧಿಕಾರ ಮದ, ಇನ್ನೊಂದು ಕಡೆ ಪ್ರೀತಿಯ ಅಮೃತ. ಒಂದು ಕುಟುಂಬಕ್ಕೆ ದ್ವೇಷವೇ ದೇವರು, ಇನ್ನೊಂದಕ್ಕೆ ಪ್ರೀತಿಯೇ ದೇವರು. ಅಧರ್ಮದ ಆಧಿಪತ್ಯ, ಧರ್ಮಪರಿ ಪಾಲನೆ ಅವುಗಳ ಮುಖಾ-ಮುಖಿ ಒಳಗೊಂಡ ವಿಭಿನ್ನ ಚಿತ್ರಕಥೆ-ನಿರೂಪಣೆ, ಉತ್ತಮತಾಂತ್ರಿಕತೆ ತಂತ್ರಜ್ಞರುಗಳ ಮೂಲಕ ಕ್ರೌರ್ಯ, ಸಾಹಸ, ಆವೇಶ, ಆಕ್ರೋಶ, ಅಟ್ಟಹಾಸಗಳಿಗೆ ಬಲಿಪಶುಗಳಾಗಲು ಸಿದ್ಧವಿಲ್ಲದ, ಸಹನೆ, ಪ್ರೀತಿ, ವಿಶ್ವಾಸ, ನಂಬಿಕೆಯ ಕುಟುಂಬ. ಅದರಲ್ಲೂ ಆ ಕ್ರೌರ್ಯದ ಕುಟುಂಬ ಅನ್ಯಭಾಷೆಯವರಾದರೆ? ಜರುಗುವ ಅನ್ಯಾಯ, ಅನಾಹುತ ಇತ್ಯಾದಿಗಳೆಲ್ಲದರ ಎದುರು ನಾಯಕ ತನ್ನ ಪ್ರೀತಿಯ ಅಸ್ತ್ರದಿಂದ ಕಟು ಹೃದಯಗಳನ್ನು ಗೆಲ್ಲುವ ಘಟನೆಗಳ ಸಾಹಸಪೂರ್ಣ, ಸ್ವಾರಸ್ಯಕರ ಮನರಂಜನೆಯ ರೂಪದ ಧಾರಾವಾಹಿಯೇ ಬ್ರಹ್ಮಾಸ್ತ್ರ.

ಪ್ರಸಿದ್ಧ ನಿರ್ಮಾಪಕ ನಿರ್ದೇಶಕರಾದ ರವಿ ಆರ್ ಗರಣಿ ಸಾರಥ್ಯದಲ್ಲಿ “ಬ್ರಹ್ಮಾಸ್ತ್ರ” ಮೂಡಿ ಬರಲಿದೆ. ಕನ್ನಡ ಕಿರುತೆರೆಯ ಪ್ರಮುಖ ನಿರ್ದೇಶಕರಲ್ಲಿ ರವಿ ಆರ್ ಗರಣಿ ಒಬ್ಬರು. ಈಗಾಗಲೇ ಹಲವಾರು ಅದ್ಭುತವಾದ ಧಾರಾವಾಹಿಗಳನ್ನು ನಿರ್ಮಿಸಿರುವ ರವಿ, ಬ್ರಹ್ಮಾಸ್ತ್ರದ ಮೂಲಕ ಕರ್ನಾಟಕದ ಕಿರುತೆರೆಯಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೆ. ಸಿದ್ಧ ಸೂತ್ರಗಳನ್ನು ಬದಿಗಿರಿಸಿ ವಿಶಿಷ್ಠವಾದ ಕಥೆಯನ್ನು ಆಯ್ದುಕೊಂಡಿರುವ ಗರಣಿ, ಉದಯ ಟಿವಿಗಾಗಿ ಅದ್ಭುತವಾದ ಧಾರಾವಾಹಿಯನ್ನು ನಿರ್ಮಿಸಿದ್ದಾರೆ. ಮಾಮೂಲಿನಂತಹ ಧಾರಾವಾಹಿಗಳನ್ನು ಮೀರಿದ ಹೊಸ ಪ್ರಯತ್ನಕ್ಕಾಗಿನ ತುಡಿತದ ಫಲವೇ ಬ್ರಹ್ಮಾಸ್ತ್ರ. ಬಹಳ ಶ್ರಮವಹಿಸಿ ಈ ಧಾರಾವಾಹಿಯ ಚಿತ್ರೀಕರಣ ಮಾಡಿದ್ದು ಕರ್ನಾಟಕದ ವೀಕ್ಷಕರಿಗೆ ನಮ್ಮ ಈ ಶ್ರಮ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ರವಿ ಗರಣಿ. ಭಾರತೀಯ ಪುರಾಣಗಳಲ್ಲಿ ಬ್ರಹ್ಮಾಸ್ತ್ರವು ಅಸ್ತ್ರಸಂಕುಲದಲ್ಲಿಯೇ ಅತ್ಯಂತ ಬಲಿಷ್ಠ ಮತ್ತು ಕೊನೆಯ ಅಸ್ತ್ರವಾಗಿರುತ್ತದೆಂದು ಪರಿಗಣಿಸಲಾಗಿದೆ. ಇದೇ ರೀತಿ ಕಥಾ ನಾಯಕಿ ತೆಲುಗು ಹುಡುಗಿ ಶಿವರಂಜನಿ ಮನೆಯವರು ಪ್ರೀತಿಯ ಬದ್ಧ ವೈರಿಗಳಾಗಿದ್ದೂ, ಪ್ರೀತಿಸುವ ಪ್ರೇಮಿಗಳಿಗೆ ಬ್ರಹ್ಮಾಸ್ತ್ರವನ್ನು ಹೂಡುವ ಕಟುಕರಂತಿರುತ್ತಾರೆ. ಆದರೆ ನಾಯಕ ಕನ್ನಡದ ಹುಡುಗ ಸಂತೋಷನ ಮನೆಯವರು ಪ್ರೀತಿಯಿಂದಲೇ ಎಲ್ಲರ ಮನಗೆಲ್ಲುವ ಗುಣದವರಾಗಿದ್ದೂ, ಪ್ರೀತಿಸುವ ಪ್ರೇಮಿಗಳಿಗೆ ಆಶ್ರಯ ನೀಡುವವರಾಗಿರುತ್ತಾರೆ. ಇಂಥಹ ೨ ರೀತಿಯ ವೈಮನಸ್ಸುಗಳ ನಡುವೆ ನಾಯಕ ನಾಯಕಿಯ ಪ್ರೀತಿಯರೋಚಕ ಕಥೆ ನಡೆಯುತ್ತದೆ. ಈಗಾಗಲೇ ಬ್ರಹ್ಮಾಸ್ತ್ರದ ಟೀಸರ್ ಸದ್ದು ಮಾಡಿದ್ದು, ವೀಕ್ಷಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದುವರೆಗೆ ಬಂದ ಕಥೆಗಳ ಪೈಕಿ ಇದು ಬೇರೆಯದೇ ಸ್ಥರದ ಕಥೆಯಾಗಿದ್ದು, ನಗರ, ಗ್ರಾಮೀಣ ಪ್ರದೇಶಗಳಲ್ಲದೇ ಗಡಿನಾಡಿನ ವೀಕ್ಷಕರಿಗೂ ಭರಪೂರ ಮನರಂಜನೆ ನೀಡಲಿದೆ ಎಂಬ ವಿಶ್ವಾಸ ವಾಹಿನಿಯದ್ದಾಗಿದೆ. ತಾರಾಬಳಗವೂ ಶಕ್ತವಾಗಿದ್ದು, ಈಗಾಗಲೇ ಮೂವತ್ತಕ್ಕೂ ಹೆಚ್ಚು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ನಿರೀಕ್ಷಿತ ಫಲಿತಾಂಶವೇ ಬಂದಿದ್ದು, ಕನ್ನಡಕಿರುತೆರೆ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ಧಾರಾವಾಹಿ ತಂಡದ್ದು. ಪ್ರಮೋದ್, ದೀಪಾ ಹಿರೇಮಠ್ ಮುಖ್ಯ ಪಾತ್ರದಲ್ಲಿದ್ದರೆ. ತ್ರಿವೇಣಿ, ಶೈಲಶ್ರೀ, ಶಂಕರ್ ಅಶ್ವಥ್, ಸುದರ್ಶನ್, ಅಶೋಕ್ ಹೆಗ್ಗಡೆ, ವಿಜಯ್ ಕೌಂಡಿಣ್ಯ, ಮೈಸೂರು ಹರಿ, ಸಿದ್ದೇಶ್ವರ್, ರಶ್ಮಿತಾ, ಪಲ್ಲವಿ, ಪವನ್, ರಜನಿಕಾಂತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಗರಣಿ ಪ್ರೊಡಕ್ಷನ್ಸ್ ವತಿಯಿಂದ ಲತಾ ಆರ್ ಗರಣಿ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಕಿರಣ್ ಅವರ ಛಾಯಾಗ್ರಹಣವಿದ್ದೂ, ತಿಲಕ್ ಆಕ್ಷನ್‌ಕಟ್ ಹೇಳುತ್ತಿದ್ದಾರೆ. ಉದಯ ಟವಿಯ “ಬ್ರಹ್ಮಾಸ್ತ್ರ” ಇದೇ ಜನವರಿ ೨೨ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೮ಕ್ಕೆ ಪ್ರಸಾರವಾಗಲಿದೆ

Copyright@2018 Chitralahari | All Rights Reserved. Photo Journalist K.S. Mokshendra,